11 April, 2008

ಮುಂಡಗೋಡ ಮಡಿಲಾಗ ಧಾರವಾಡದಾಂವ....

ಮಲೆನಾಡ ಮೂಲೆಯಲಿ ಸೆರಗು ಹೊದ್ದುಕೊಂಡು ಸದ್ದಿಲ್ಲದೇ ಕನಸು ಕಾಣುವ, ಬೆಳಕು ತೋರುವ, ಬಯಕೆ ಹುಟ್ಟಿಸುವ ಜೀವಗಳು ಮಿಡಿಯುವ ಮುಂಡಗೋಡ ಒಂದು ದೊಡ್ಡ ಗ್ರಾಮವೆಂದರೂ ಸೈ. ಪಟ್ಟಣವೂ ಹೌದು. ಟಿಬೆಟಿಯನ್ ಕಾಲನಿಯ ದೆಸೆಯಿಂದ ಜಗತ್ತಿಗೆ ಚಿರಪರಿಚಿತ ಊರು. ಪಕ್ಕದಲ್ಲೇ ಪ್ರಸಿದ್ಧ ಅತ್ತಿವೇರಿ ಪಕ್ಷಿಧಾಮ. ರಮಣೀಯ ಸೊಬಗನ್ನು ಮಡಿಲಲ್ಲಿ ತುಂಬಿಕೊಂಡ ನಯನ ಮನೋಹರ ತಾಣ.
ಪಿ.ಎಚ್.ಡಿ ಸಂಶೋಧನೆಯಲ್ಲಿ ತಲ್ಲೀನನಾಗಲು ಬಿ.ಇಡಿ ಮತ್ತು ಪದವಿ ತರಗತಿಗಳಿಗೆ ಪಾಠ ಮಾಡಲು ಮನಸು ಒಲ್ಲೆ ಎನಿಸಿ ಕೆಲಸಕ್ಕೆ ವಿದಾಯ ಹೇಳಿ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಜ್ಞಾನಾರ್ಜನೆ ಮಾಡುತ್ತ ಸುಳಿದಾಡುತ್ತಿದ್ದೆ. ಒಂದಿನ ಹಿರಿಯ ಪ್ರಾಧ್ಯಾಪಕರೊಬ್ಬರು ನನ್ನನ್ನು ಬಳಿಗೆ ಕರೆದು ಹೀಗೆ ಕಿವಿ ಮಾತು ಹೇಳಿದ್ದರು. '' ಏನ್ರಿ ಬಂಗಾರಿ ಇಷ್ಟೊಂದ ಓದಿ, ಅನುಭವ ಪಡೆದು ಬರೀ ಸಂಶೋಧನೆ ಮಾಡ್ಕೋತ ಟೈಂ ಕಳದ್ರ ಚಲೋ ಅನುಸುದಿಲ್ಲ ಬಿಡ್ರಿ. ನಿಮ್ಮ ಜ್ಞಾನ ಜಗತ್ತಿಗೆ ಸಿಗಬೇಕು. ಪಾಠಾ ಮಾಡುದನ್ನ ಮಾತ್ರ ನಿಲ್ಲಿಸಬ್ಯಾಡ್ರಿ''. ಈ ಮಾತು ಕೇಳಿ ನನ್ನ ಮೈ ಜುಂ ಎಂದಿತು. ಹೌದಲ್ಲ! ನಾನು ಸಂಶೋಧನೆ ಮಾಡ್ತಾನೆ ಪಾಠಾನೂ ಮಾಡಬಹುದಲಾ ಅನಸ್ತು. ನಾನೀಗಾಗಲೇ ಹೈಸ್ಕೂಲು ಶಾಲಾ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿ ಕೊಡಗಿನ 'ಕರಿಕೆ' ಗ್ರಾಮದ ಹೈಸ್ಕೂಲಿಗೆ ಇಂಗ್ಲೀಷ ಭಾಷಾ ಶಿಕ್ಷಕನಾಗಿ ನೇಮಕಗೊಂಡಿದ್ದೇನೆ. ಆದರೆ, ಸಂಶೋಧನೆಯ ಕಾರಣ ಕೆಲಸಕ್ಕೆ ಇನ್ನೂ ಹಾಜರಾಗಿರಲಿಲ್ಲ.ಇಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಂಗ್ಲೀಷ ಭಾಷಾ ಶಿಕ್ಷಕರ ಕೊರತೆ ಇದ್ದುದನ್ನು ಗಮನಿಸಿದೆ. ಮೊದಲಿನಿಂದಲೂ ಶಿರಸಿ, ಬನವಾಸಿ, ಗೋಕರ್ಣ, ಮುರ್ಡೇಶ್ವರ ಈ ಪ್ರದೇಶಗಳು ನನ್ನ ನೆಚ್ಚಿನ ತಾಣಗಳಾಗಿದ್ದರಿಂದ ಅತಿಥಿ ಉಪನ್ಯಾಸಕ ವೃತ್ತಿಯನ್ನು ಮುಂಡಗೋಡಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆಪ್ಟಂಬರ್ 17, 2007 ರಿಂದ ಪ್ರಾರಂಭಿಸಿದೆ. ಇನ್ನೇನು ಎಪ್ರಿಲ್ 30, 2008 ಕ್ಕೆ ವಿದಾಯ ಹೇಳುತ್ತಿದ್ದೇನೆ.
ಇಂಗ್ಲೀಷ ಭಾಷೆಯ ಜೊತೆ ಜೊತೆಗೇನೆ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿಯನ್ನ ಹೆಚ್ಚಿಸಲು ನನ್ನ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದೆ. ಕಾಲೇಜಿನಲ್ಲಿರುವ ಕೆಲವು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಾಹಿತ್ಯಾಸಕ್ತಿಯನ್ನ ಗಮನಿಸಿ, ಪ್ರೋತ್ಸಾಹಿಸಿ ಪ್ರಾಚಾರ್ಯರ ಅನುಮತಿ ಪಡೆದು '' ಶಿಕ್ಷಣ ಮಾನಸ'' ಕೈ ಬರೆಹದ ಗೋಡೆ ಪತ್ರಿಕೆಯನ್ನು 21 ಮಾರ್ಚ್ 2008 ರಂದು ಹೊರ ತಂದಿದ್ದೂ ಆಯಿತು. ಅದು ಕಾಲೇಜಿನ ಬಹುತೇಕ ಎಲ್ಲ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಗಮನ ಸೆಳೆದದ್ದೂ ಆಯಿತು.
ಈ ಕಾರ್ಯ ಕೈಗೊಳ್ಳಲು ವಿದ್ಯಾರ್ಥಿ ವೃಂದ ಹಾಗೂ ಪ್ರಾಚಾರ್ಯರಾದ ಡಾ.ಎ.ಎಸ್.ಕಬ್ಬೂರ ಅವರ ಸಹಕಾರ ಅವಿಸ್ಮರಣೀಯ. ಜೊತೆಗೆ ಉಪನ್ಯಾಸಕರಾದ ಶ್ರೀಮತಿ ವಿದ್ಯಾ ನಾಯಕ, ಬಿ.ಎಚ್.ಮೋರೆ, ಎಸ್.ಎನ್.ಮೇಟಿ, ಆರ್.ಎಲ್.ತೆಂಬದ, ಜೆ.ಎಸ್.ಹೆಗಡೆ, ಶ್ರೀ ಹಡಪದ, ವಿಜಯ ಕಾಂಬಳೆ, ಹನಮಂತ ಸಂಜೀವಣ್ಣವರ ಅವರಲ್ಲದೇ ಕಾಲೇಜಿನ ಇತರೆ ಸಿಬ್ಬಂಧಿ ವರ್ಗ ತುಂಬು ಹೃದಯದ ಸಹಕಾರ ನೀಡಿದ್ದನ್ನು ಎಂದಿಗೂ ಮರೆಯಲಾರೆ. ಜಗದೀಶ, ಸಿದ್ದಾರ್ಥ ಮುಂತಾದವರ ಸಹೃದಯತೆಯನ್ನೂ ನೆನೆಯದೇ ಇರಲಾರೆ.
ಮನದ ಮೂಲೆಯಲ್ಲಿ ಮನೆ ಮಾಡಿ ಮೊಳಕೆ ಒಡೆಯುವ ಮರಿ ಮುತ್ತುಗಳಿಗೆ ತುತ್ತು ನೀಡುವ ಕೆಲಸಕ್ಕೆ ಪ್ರೇರಣೆ ನೀಡಿದ್ದೇನಷ್ಟೆ.ಇದರಲ್ಲಿ ನನ್ನ ಸಾಧನೆ ಏನೂ ಇಲ್ಲ.
ವಿದ್ಯಾರ್ಥಿಗಳನೇಕರು ತಮಗೆ ತೋಚಿದ್ದನ್ನು ಗೀಚಿ ಸಹಕರಿಸಿದ್ದಾರೆ. ಇದೀಗ ಅವರ ಬರೆಹಗಳು ಬ್ಲಾಗ್ ನಲ್ಲೂ ಬಾಯಿ ಬಿಟ್ಟಿರುವುದು ಅಚ್ಚರಿ ಹಾಗೂ ಸಂತೋಷದ ಸಂಗತಿ. ಇನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ವೃಂದವು ಕಥೆ, ಲೇಖನ, ಚುಟುಕು, ನಗೆ ಹನಿ, ಸುಭಾಷಿತ, ತಮ್ಮ ಅನುಭವ ,ಮತ್ತಿತರೆ ವಿಚಾರಗಳನ್ನು ಮುಕ್ತವಾಗಿ ಬರೆದು ಕೈ ಬರೆಹ ಪತ್ರಿಕೆಗೆ ಮತ್ತು ಈ ಬ್ಲಾಗ್ ಸೈಟಿಗೆ ಕೊಟ್ಟು ಸಹಕರಿಸುವರೆಂಬ ವಿಶ್ವಾಸ ನನಗಿದೆ.
ಒಂದರ್ಥದಲ್ಲಿ ಪತ್ರಿಕೆ ಬೇಗ ಕಣ್ತೆರೆಯುವುದಕ್ಕೆ ಕಾರಣರಾದ ಕು.ಶಿಲ್ಪಾ, ಕು.ಅಶ್ವಿನಿ, ಅಜ್ಜಯ್ಯ, ಮಲ್ಲೇಶಿ, ಪ್ರಾಚಾರ್ಯರು ನನ್ನ ಸಹೋದ್ಯೋಗಿಗಳಿಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು. ಬ್ಲಾಗ್ ಸೈಟಿನಲ್ಲಿ ಭರ್ರನೇ ರೂಪು ಪಡೆದು ನಿಮ್ಮೆದುರು ತನ್ನ ರೂಪ ತೋರಿಸಲು ತಮ್ಮ ಒತ್ತಡದ ಕೆಲಸಗಳ ಮಧ್ಯೆಯೂ ನನಗಾಗಿ ಸಮಯ ಸರಿಸಿ, ಅಕ್ಷರ ಪೇರಿಸಿದ ಸನ್ಮಿತ್ರ ಸುಭಾಸ ಮಂಗಳೂರ ಅವರಿಗೂ ನನ್ನ ಹಾಗೂ ತಮ್ಮೆಲ್ಲರ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಏನೇನೋ ಕೆಲಸಗಳ ಮಧ್ಯೆ ಇಂಥದ್ದೊಂದು ಚಟುವಟಿಕೆ ನಡೆಸಲು ಪ್ರೇರಣೆ ನೀಡಿದ ಆ ಶಕ್ತಿಗೆ ಭಕ್ತಿ ಪೂರ್ವಕ ನಮನಗಳು. ಮತ್ತೆ ಕೆಲವೇ ದಿನಗಳಲ್ಲಿ ಹೊಸ ವಿಚಾರಗಳೊಂದಿಗೆ ನಿಮ್ಮ ಮನದ ಅಂಗಳಕ್ಕೆ ಬರಲು ದಿನಗಳನ್ನು ಎದುರು ನೋಡುತ್ತಿದ್ದೇನೆ. ಅಂಗಳದಲ್ಲಿ ರಂಗೋಲಿ, ಪ್ರೀತಿ, ವಿಶ್ವಾಸ, ಸಹೃದಯತೆ ತುಂಬಿ ಕೊಂಡಿರುತ್ತೀರಿ ಅಲ್ಲವೇ?
***********
ಸಂಪಾದಕ :
ಬಸವರಾಜು ಯ. ಬಂಗಾರಿ
ಧಾರವಾಡ

10 April, 2008

ನುಡಿ ಮುತ್ತುಗಳು


ಹರಟೆ

''ಪೂರ್ವಾನುಭವಗಳ ಸ್ವಪ್ನಾರಣ್ಯದಲ್ಲಿ
ಪೋಲಿ ಪೋಲಿಯಾಗಿ ಅಲೆಯುವುದೇ ಹರಟೆ''
-ಕುವೆಂಪು
**********
ಬದುಕು

''ಸತ್ಯಗಳು ಯಾವಾಗಲೂ ಚುಚ್ಚುತ್ತಿರುತ್ತವೆ.
ಕನಸಿನ ಕೋಟೆಗಳು ಕುಸಿದು ಬೀಳುತ್ತವೆ.
ಬದುಕೆಂದರೆ, ಕನಸು ವಾಸ್ತವಗಳ ನಡುವೆ
ವಿಲವಿಲನೆ ಮಿಡಿದಾಡುವ ತುಡಿತದಾಯುಷ್ಯ.''
-ವಿಜಯಾ ಮಂಗ್ಳೂರು

************
ಸಂಗ್ರಹ :
ಸುರೇಖಾ ಬಸಾಪೂರ
ಬಿ.ಎ 6 ನೇ ಸೆಮೆಸ್ಟರ್



ಕನ್ನಡ-ಕನ್ನಡಕ


1)
ಬರೆದು ಬರೆದು
ಕನ್ನಡ ಕವನ
ಕಣ್ಣಿಗೆ ಪಡೆದುಕೊಂಡೆ
ಕನ್ನಡಕವನ್ನ
೨)
ಕಣ್ಣು ತೆರೆದಾಗ ಜನನ
ಕಣ್ಣು ಮುಚ್ಚಿದಾಗ ಮರಣ
ಇವೆರಡರ ನಡುವೆ ರೆಪ್ಪೆಯಾಡಿಸುವುದೇ ಜೀವನ
********
ಮಲ್ಲೇಶಿ ಎನ್. ರಾನೋಜಿ
ಬಿ.ಎ 6 ನೇ ಸೆಮೆಸ್ಟರ್


ಹಾಟ್ ಕಾಫಿ


ಹಾಟ್ ಕಾಫಿ ವಿತ್ ಮೈ ಕೋಲ್ಡ್ ಎಸ್.ಎಮ್.ಎಸ್.....
ಕೋಲ್ಡ್ ಶಾವರ್ ವಿತ್ ಮೈ ವಾರ್ಮ್ ಎಸ್.ಎಮ್.ಎಸ್......
ಸ್ಪೈಸಿ ಬ್ರೆಕ್ ಫಾಸ್ಟ್ ವಿತ್ ಮೈ ಸ್ವೀಟ್ ಎಸ್.ಎಮ್.ಎಸ್.....
ಲವ್ಲೀ ಮಾರ್ ನಿಂಗ್ ವಿತ್ ಮೈ ಗುಡ್ ಎಸ್.ಎಮ್.ಎಸ್.....

*********
ಸರ್ಫ ರಾಜ್ ಅಹ್ಮದ ಎಮ್.ಮುಲ್ಲಾ
ಬಿ.ಎ ಚತುರ್ಥ ಸೆಮೆಸ್ಟರ್

02 April, 2008

ಸ್ನೇಹ ಸಿಂಚನ

ಒಳ್ಳೆಯ ಸ್ನೇಹಿತರನ್ನು ಪಡಿಬೇಕಾದ್ರೂ ಪುಣ್ಯ ಮಾಡಿರಬೇಕು. ಅಂಥ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲರೀ. ಸ್ನೇಹ ಎಲ್ಲರೂ ಬಯಸುತ್ತಾರೆ. ಆದರೆ ನಿಸ್ವಾರ್ಥತೆಯಿಂದ ಸ್ನೇಹ ಮಾಡೋರು ತುಂಬಾ ಕಡಮೆ. ದುರುದ್ದೇಶದಿಂದ ಸ್ನೇಹ ಮಾಡೋರೆ ಹೆಚ್ಚು. ಆದರೆ, ನಿಜವಾದ ಸ್ನೇಹ ಮಾಡ್ಕೋಣೋದು ಅಲ್ಲ. ಅದು ಆಗೋದು. ಒಳ್ಳೆಯ ಮನಸ್ಸಿರುವವರಿಗೆ ಒಳ್ಳೆಯ ಮನಸ್ಸಿರುವಂತಹ, ಒಳ್ಳೆಯ ವ್ಯಕ್ತಿಯ ಸ್ನೇಹ ಒಳ್ಳೆಯ ರೀತಿಯಲ್ಲಿ ಆಗುತ್ತೆ. ಒಳ್ಳೆಯ ತೆರನಾಗಿ ಮುಂದುವರೆಯುತ್ತದೆ.
ಸ್ನೇಹ ಮುಖ ನೋಡಿ ಮಾಡುವಂಥದ್ದಲ್ಲ. ಮೃದು ಮನಸ್ಸಿನಿಂದ ಉತ್ಪತ್ತಿಯಾಗಿ ಇನ್ನೊಂದು ಮನಸ್ಸಿನಲ್ಲಿ ಬೀಜ ಬಿತ್ತುವಂಥದ್ದು. ಸ್ನೇಹ ಮಾತನಾಡಿದರೆ, ನೋಡಿದರೆ, ಅವರ ಹತ್ತಿರ ಇದ್ದರೆ ಬರುವಂಥದ್ದಲ್ಲ.ಎಲ್ಲೇ ಇರಲಿ ಹೃದಯಗಳು ಪರಸ್ಪರ ಒಬ್ಬರಿಗಾಗಿ ಮಿಡಿಯುತ್ತಿದ್ದರೆ ಸಾಕು. ಇಬ್ಬರಲ್ಲೂ ಸ್ನೇಹದ ತುಡಿತ ಅರ್ಥವಾಗುತ್ತದೆ. ಮಾತನಾಡದೇ ಭಾವನೆಗಳನ್ನು ಅರಿತುಕೊಳ್ಳುವ ಸಾಮರ್ಥ್ಯ ಸ್ನೇಹಕ್ಕಿದೆ.
ಒಬ್ಬ ಮನುಷ್ಯನ ಪರಿಸ್ಥಿತಿಯನ್ನು ಇನ್ನೊಬ್ಬ ಸ್ನೇಹಿತ ಮಾತ್ರ ಒಳಗಿನಿಂದ ಅರ್ಥ ಮಾಡಿಕೊಳ್ಳಲು ಸಾಧ್ಯ. ಯಾವುದೇ ರೀತಿಯ ಮುಚ್ಚು-ಮರೆಯಿಲ್ಲದೇ ಎಲ್ಲವನ್ನೂ ಒಬ್ಬ ಗೆಳೆಯನ ಮುಂದೆ ಮಾತ್ರ ಹೇಳಿಕೊಳ್ಳಲು ಸಾಧ್ಯ. ಅಷ್ಟಿಲ್ಲದೇ ಹೇಳುತ್ತಾರಾ? ''ಫ್ರೆಂಡ್ ಈಸ್ ಎ ಸೆಕೆಂಡ್ ವೈಫ್'' ಅಂತ. ವ್ಯಕ್ತಿ ಜೀವನದಲ್ಲಿ ಒಬ್ಬ ಒಳ್ಳೆಯ ಸ್ನೇಹಿತ ಸಿಕ್ಕಿರುತ್ತಾರೆ. ಆದರೆ, ಕೆಲವೊಮ್ಮೆ ಅಂಥ ನಿಜವಾದ ಸ್ನೇಹಿತನ ಪ್ರೀತಿಯನ್ನು ಕಳೆದುಕೊಂಡಿರುತ್ತೇವೆ. ಅದನ್ನು ಗುರುತಿಸುವಂತಹ ಸಾಮರ್ಥ್ಯ ಇರಬೇಕು. ನಿಮಗೊಂದು ವಿಷಯ ಗೊತ್ತಾ? ದೇವರು ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಮಗೆ ಬೇಕಾದಂತಹ ಸ್ನೇಹಿತನನ್ನು ಕಳಿಸಿರುವುದಂತೂ ಸತ್ಯ.
ಸ್ನೇಹ ಮಾಡಲು ಹಿಂಜರಿಯಬೇಡಿ. ಸ್ನೇಹದ ಪ್ರೀತಿಯನ್ನು ಅನುಭವಿಸಿ. ಸ್ನೇಹಕ್ಕೆ ಯಾವುದೇ ರೀತಿ-ನೀತಿ, ವಯೋಮಿತಿ, ಇತಿ-ಮಿತಿ ಇರುವುದಿಲ್ಲ. ಸ್ನೇಹ ಮಾಡುವಂಥ ಒಳ್ಳೆಯ ಮನಸ್ಥಿತಿ ಇರಬೇಕಾದುದು ಅಪೇಕ್ಷಣೀಯ. ಸಂತೋಷದಿಂದ ಸ್ನೇಹ ಮಾಡಿ.
*************
ಕು.ಶಿಲ್ಪಾ ಕೋರಿಶೆಟ್ಟರ
ಬಿ.ಎ ಚತುರ್ಥ ಸೆಮೆಸ್ಟರ್
______________________________________________________________

ಕಾರಣ ಯಾರು?
ಮನಸು ಕಂಡ ಕನಸು ನೂರು
ಕಲ್ಪನೆಗೆ ಹೊಣೆ ಯಾರು?
ಹೃದಯದ ಮಾತುಗಳು ನೂರು
ಭಾವನೆಗಳಿಗೆ ಹೊಣೆ ಯಾರು?
ಕಣ್ಣೀರಿನ ಕತೆಗಳು ನೂರು
ನೋವಿಗೆ ಹೊಣೆ ಯಾರು?
ಮೌನಕೆ ಕಾರಣ ನೂರು
ಅಶಾಂತಿಗೆ ಕಾರಣ ಯಾರು?
ಮಧುರ ಕ್ಷಣಗಳು ನೂರು
ನೆನಪಿಗೆ ಕಾರಣ ಯಾರು?
ಯೌವ್ವನಕೆ ರೆಕ್ಕೆಗಳು ನೂರು
ಹಾರಾಟಕೆ ಕಾರಣ ಯಾರು?
ಒಲವಿನ ಓಲೆ ನೂರು
ಪಿಸುಮಾತಿಗೆ ಕಾರಣ ಯಾರು?
ಆಸೆಯ ತವಕ ನೂರು
ನಿರಾಸೆಗೆ ಕಾರಣ ಯಾರು?
ಪ್ರೀತಿಗೆ ಹುಟ್ಟು ನೂರು
ಸೃಷ್ಟಿಗೆ ಕಾರಣ ಯಾರು?
*********
ಅಶ್ವಿನಿ ಅಂಕಲಕೋಟಿ
ಬಿ.ಎ ಚತುರ್ಥ ಸೆಮೆಸ್ಟರ್


ಕನಸುಗಳ ರಿಚಾರ್ಜ

ಹಲೋ ಹುಡುಗಿ
ನಿನ್ನ ಮನದ
ಮೊಬೈಲ್ ಗೆ ನನ್ನದೊಂದು
ಸ್ವೀಟ್ ಮೆಸೇಜ್ ಕಳಿಸಿರುವೆ.
ಪ್ರತಿ ಸಾಲಿನಲ್ಲೂ ಸ್ನೇಹದ ಹೆಸರಿನಲಿ
ಅಕ್ಷರ ಬಿತ್ತಿರುವೆ.
ಇಷ್ಟವಾದರೆ ನಿನ್ನ ಪುಟ್ಟ ಹೃದಯದ
ಇನಬಾಕ್ಸ್ ನಲ್ಲಿ ಸೇವ್ ಮಾಡು.
ಕಷ್ಟವಾದರೆ ಡಿಲೀಟ್ ಮಾಡಿ ಬಿಡು.
ಆದರೆ,
ಈ ದೇಹದಲ್ಲಿ ಪ್ರಾಣವೆಂಬ
ಸಿಮ್ ಕಾರ್ಡ್ ಇರುವವರೆಗೂ
ನಿನ್ನ ಒಂದು ಕಾಲ್ ಗೋಸ್ಕರ ನನ್ನ
ಕನಸುಗಳ ರಿಚಾರ್ಜ ಮಾಡಿಸುತ್ತಲೇ ಇರುತ್ತೇನೆ.
********
ಅಜ್ಜಯ್ಯ ಎಸ್.ಎಸ್
ಬಿ.ಎ ದ್ವಿತೀಯ ಸೆಮೆಸ್ಟರ್

ಪ್ರಾಬ್ಲಮ್ KICK


ಸ್ಮೋಕಿಂಗ್ ಒಂದು ನಿಮಿಷದ ಕಿಕ್
ಡ್ರಿಂಕಿಂಗ್ ಒಂದು ತಾಸಿನ ಕಿಕ್
ಲವ್ ಒಂದು ವರ್ಷದ ಕಿಕ್
ಆದರೆ, ಲವ್ ಫೇಲ್ಯುವರ್ ಲೈಫ್ ಲಾಂಗ್ ಕಿಕ್
ಕೇರ್ ಫುಲ್, ಒಳ್ಳೆಯ ಉದಾಹರಣೆ
''ಮುಂಗಾರು ಮಳೆ''.
**********
ಪ್ರವೀಣ ಎಸ್. ಜಿ
ಬಿ.ಎ ದ್ವಿತೀಯ ಸೆಮೆಸ್ಟರ್

26 March, 2008

ಒಂದು ಕ್ಷಣ

ಇದೀಗ ಆಳ ತಿಳಿಯದ ಬ್ಲಾಗ್ ನ ಬಾವಿಯೊಳಗೆ ಇಳಿಸಿ ಈಜಲು ಕಲಿಸಿದ ಮಿತ್ರ ಸುಭಾಸ ಮಂಗಳೂರ ಅವರಿಗೆ ಹೃದಯಾಂತರಾಳದ ಅಭಿನಂದನೆಗಳು.